ಮದ್ದೂರು ಮತ್ತು ಸುತ್ತಮುತ್ತಲಿನ ಭಾಗಗಳಿಂದ ಪ್ರತಿನಿತ್ಯ ಬೆಂಗಳೂರಿಗೆ ಉದ್ಯೋಗ ಮತ್ತು ಇತರೆ ಕೆಲಸಗಳಿಗೆ ತೆರಳುವ ರೈಲು ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಇಲಾಖೆಯ ನಿರ್ಧಾರವೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿಂದೆ ಮದ್ದೂರಿನಿಂದ ಬೆಳಿಗ್ಗೆ 7 ಗಂಟೆಗೆ ಸಂಚರಿಸುತ್ತಿದ್ದ ‘ವಿಶ್ವಮಾನವ ಎಕ್ಸ್ಪ್ರೆಸ್’ ರೈಲಿನ ಸಮಯವನ್ನು ಈಗ 8 ಗಂಟೆ 5 ನಿಮಿಷಕ್ಕೆ ಮುಂದೂಡಲಾಗಿದೆ. ಬೆಳಿಗ್ಗೆ 6 ಗಂಟೆಯ ಚೆನ್ನೈ ಎಕ್ಸ್ಪ್ರೆಸ್ ರೈಲು ತಪ್ಪಿದರೆ, ಬೆಂಗಳೂರಿಗೆ ಹೋಗುವವರಿಗೆ ಬೆಳಿಗ್ಗೆ 7:30ರ ಗಂಟೆಯ ಪ್ಯಾಸೆಂಜರ್ ರೈಲೇ ಗತಿ ಎಂಬಂತಾಗಿದೆ. ವಿಶ್ವಮಾನವ ರೈಲಿನ […]
The post ಮದ್ದೂರು | ವಿಶ್ವಮಾನವ ರೈಲು ಪ್ರಯಾಣದ ಸಮಯ ಬದಲಾವಣೆ : ಪ್ರಯಾಣಿಕರ ಆಕ್ರೋಶ appeared first on nudikarnataka.
ಮದ್ದೂರು ಮತ್ತು ಸುತ್ತಮುತ್ತಲಿನ ಭಾಗಗಳಿಂದ ಪ್ರತಿನಿತ್ಯ ಬೆಂಗಳೂರಿಗೆ ಉದ್ಯೋಗ ಮತ್ತು ಇತರೆ ಕೆಲಸಗಳಿಗೆ ತೆರಳುವ ರೈಲು ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಇಲಾಖೆಯ ನಿರ್ಧಾರವೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿಂದೆ ಮದ್ದೂರಿನಿಂದ ಬೆಳಿಗ್ಗೆ 7 ಗಂಟೆಗೆ ಸಂಚರಿಸುತ್ತಿದ್ದ ‘ವಿಶ್ವಮಾನವ ಎಕ್ಸ್ಪ್ರೆಸ್’ ರೈಲಿನ ಸಮಯವನ್ನು ಈಗ 8 ಗಂಟೆ 5 ನಿಮಿಷಕ್ಕೆ ಮುಂದೂಡಲಾಗಿದೆ.
ಬೆಳಿಗ್ಗೆ 6 ಗಂಟೆಯ ಚೆನ್ನೈ ಎಕ್ಸ್ಪ್ರೆಸ್ ರೈಲು ತಪ್ಪಿದರೆ, ಬೆಂಗಳೂರಿಗೆ ಹೋಗುವವರಿಗೆ ಬೆಳಿಗ್ಗೆ 7:30ರ ಗಂಟೆಯ ಪ್ಯಾಸೆಂಜರ್ ರೈಲೇ ಗತಿ ಎಂಬಂತಾಗಿದೆ. ವಿಶ್ವಮಾನವ ರೈಲಿನ ಸಮಯ ಬದಲಾವಣೆಯಿಂದಾಗಿ 12 ಬೋಗಿಗಳ ಪ್ಯಾಸೆಂಜರ್ ರೈಲಿನಲ್ಲಿ ಪಾಂಡವಪುರ, ಮಂಡ್ಯ ಮತ್ತು ಮದ್ದೂರಿನ ಸಾವಿರಾರು ಪ್ರಯಾಣಿಕರು ಒಟ್ಟಿಗೆ ಏರುತ್ತಿದ್ದಾರೆ. ಇದರಿಂದಾಗಿ ರೈಲಿನಲ್ಲಿ ಕಾಲಿಡಲು ಜಾಗ ಇಲ್ಲದಂತಾಗಿದ್ದು, ಉಸಿರಾಡಲು ಕಷ್ಟವಾಗುವಷ್ಟು ಜನದಟ್ಟಣೆ ಉಂಟಾಗುತ್ತಿದೆ ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ.

ನಿಂತು ಪ್ರಯಾಣ ಮಾಡಲಾಗದೆ ಮಹಿಳೆಯರು ಮತ್ತು ವೃದ್ಧರು ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಸಮಯ ಬದಲಾವಣೆಯಿಂದ ಆಗುತ್ತಿರುವ ತೊಂದರೆಯ ಬಗ್ಗೆ ಈಗಾಗಲೇ ಸ್ಥಳೀಯ ಮದ್ದೂರು ಶಾಸಕರನ್ನು ಭೇಟಿ ಮಾಡಿರುವ ಪ್ರಯಾಣಿಕರ ನಿಯೋಗ, ಲಿಖಿತ ಮನವಿ ಸಲ್ಲಿಸಿದೆ.
ಪ್ರತಿದಿನ ಬೆಳಿಗ್ಗೆ 7:10ಕ್ಕೆ ಚನ್ನಪಟ್ಟಣದಿಂದ ಬೆಂಗಳೂರಿಗೆ ಹೊರಡುವ ಚನ್ನಪಟ್ಟಣ-ಕೆಎಸ್ಆರ್ ಬೆಂಗಳೂರು ಮೆಮೊ (ರೈಲು ಸಂಖ್ಯೆ: 06536) ರೈಲನ್ನು ಮಂಡ್ಯದಿಂದಲೇ ಪ್ರಾರಂಭಿಸುವಂತೆ ಮನವಿಯಲ್ಲಿ ಕೋರಲಾಗಿದೆ. ಈ ಬದಲಾವಣೆಯಿಂದ ಮಂಡ್ಯ ಭಾಗದ ನೂರಾರು ಉದ್ಯೋಗಿಗಳು ಮತ್ತು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರೈಲ್ವೆ ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕರ ಮನವಿಯನ್ನು ಸ್ವೀಕರಿಸಿದ ಶಾಸಕರು, ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮನವಿ ಪತ್ರದಲ್ಲಿರುವ ಅಂಶಗಳನ್ನು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇದೂ ಅಲ್ಲದೆ ಒಕ್ಕೂಟ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಈ ಸಮಸ್ಯೆಯನ್ನು ಅವರ ಗಮನಕ್ಕೆ ತರಲು ಪ್ರಯಾಣಿಕರು ನಿರ್ಧರಿಸಿದ್ದಾರೆ. ”ನಮಗೆ ಹಳೆಯ ಸಮಯದಲ್ಲೇ ರೈಲು ಬೇಕು, ಇಲ್ಲವೇ ಅದೇ ಸಮಯಕ್ಕೆ ಪರ್ಯಾಯವಾಗಿ ಮತ್ತೊಂದು ರೈಲಿನ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ನಮ್ಮ ಸಂಕಷ್ಟಕ್ಕೆ ಕೊನೆಯೇ ಇಲ್ಲ” ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
The post ಮದ್ದೂರು | ವಿಶ್ವಮಾನವ ರೈಲು ಪ್ರಯಾಣದ ಸಮಯ ಬದಲಾವಣೆ : ಪ್ರಯಾಣಿಕರ ಆಕ್ರೋಶ appeared first on nudikarnataka.
Previous Article
ಬಳ್ಳಾರಿ ಗಲಾಟೆ ವಿಚಾರದಲ್ಲಿ SP ಸಸ್ಪೆಂಡ್ : ಸರ್ಕಾರದ ವಿರುದ್ದ ಬಿವೈ ವಿಜಯೇಂದ್ರ ಕಿಡಿ
Next Article
ಸಾವಿತ್ರಿಬಾಯಿ ಪುಲೆ ಮತ್ತು ಲೂಯಿಸ್ ಬ್ರೈಲ್…….